ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿ, ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (DBT) ಬದಲಿಗೆ 5 ಕೆ.ಜಿ ಅಕ್ಕಿ ವಿತರಿಸಲು ನಿರ್ಧರಿಸಿದೆ.
ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದ ಪ್ರಕಾರ, ರಾಜ್ಯದಲ್ಲಿನ ಅಂತ್ಯೋದಯ ಅನ್ನ ಯೋಜನೆ (AAY) ಮತ್ತು ಆದ್ಯತಾ ಪಡಿತರ ಚೀಟಿ (PHH) ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುವುದು. ಇದರಲ್ಲಿ 5 ಕೆ.ಜಿ ಕೇಂದ್ರ ಸರ್ಕಾರದಿಂದ ಮತ್ತು 5 ಕೆ.ಜಿ ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತದೆ.
ಇದಕ್ಕೂ ಮೊದಲು, ಅಕ್ಕಿಯ ಕೊರತೆಯಿಂದ, ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿಗೆ ಬದಲಾಗಿ ಪ್ರತಿ ಕೆ.ಜಿಗೆ ₹34 ಎಣಿಕೆ ಮಾಡಿ ₹170 ನೇರ ನಗದು ವರ್ಗಾಯಿಸಲಾಗುತ್ತಿತ್ತು. ಆದರೆ, ಭಾರತ ಆಹಾರ ನಿಗಮದ (FCI) OMSS(D) ಯೋಜನೆಯಡಿ ರಾಜ್ಯಗಳಿಗೆ ಕ್ವಿಂಟಾಲ್ಗೆ ₹2250 ದರದಲ್ಲಿ ಅಕ್ಕಿ ಮಾರಾಟದ ಅನುಮತಿ ನೀಡಿದ ಹಿನ್ನೆಲೆ, ರಾಜ್ಯ ಸರ್ಕಾರವು ನಗದು ವರ್ಗಾವಣೆ ಬದಲಾಗಿ ಪುನಃ ಅಕ್ಕಿ ವಿತರಿಸಲು ತೀರ್ಮಾನಿಸಿದೆ.
ಜನವರಿ 2025 ರಿಂದ OMSS(D) ಅಕ್ಕಿಯ ದರವನ್ನು ಪ್ರತಿ ಕೆ.ಜಿಗೆ ₹22.50 ಎಂದು ನಿಗದಿಪಡಿಸಲಾಗಿದ್ದು, ಈ ಆಧಾರದ ಮೇಲೆ ಫೆಬ್ರುವರಿ 2025 ರಿಂದ DBT ಯನ್ನು ಸ್ಥಗಿತಗೊಳಿಸಿ, ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ವಿತರಣೆ ಪುನಃ ಆರಂಭಿಸಲಾಗುತ್ತದೆ.
ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಜಾರಿ ಮಾಡಲಾಗಿದೆ.